ಭಟ್ಕಳ, ಅಕ್ಟೋಬರ್ 31: ತಾಲೂಕಿನ ಜಾಲಿ ಸಮುದ್ರ ತೀರದಲ್ಲಿ ತಮಿಳರು ಮೀನುಗಾರಿಕೆ ನಡೆಸುವ ಕುರಿತು ಸ್ಥಳಿಯ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದು, ಅವರನ್ನು ಸ್ಥಳಾಂತರಿಸುವಂತೆ ಗ್ರಾಮಪಂಚಾಯತ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಇದೊಂದು ಅಕ್ರಮ ಚಟುವಟಿಕೆಯಾಗಿದ್ದು, ಗ್ರಾಮಪಂಚಾಯತ ಅಥವಾ ತಾಲೂಕಿನ ಮೀನುಗಾರಿಕಾ ಇಲಾಖೆಯಿಂದ ಪರವಾನಿಗೆ ಪಡೆದಿಲ್ಲ ಎಂದು ಆಪಾದಿಸಿರುವ ಅವರು, ಇದರಿಂದ ಮೊದಲೇ ಮತ್ಸಕ್ಷಾಮದಿಂದ ಬಳಲುತ್ತಿರುವ ಇಲ್ಲಿಯ ಜನರು ತೊಂದರೆಯನ್ನು ಅನುಭವಿಸುವಂತಾಗಿದೆ. ಕಡಿಮೆ ದರವನ್ನು ನಿಗದಿಪಡಿಸುವ ತಮಿಳರು ಮಾರುಕಟ್ಟೆಯಲ್ಲಿಯೂ ಸ್ಥಳೀಯರಿಗೆ ಹೊಡೆತ ನೀಡುತ್ತಿದ್ದಾರೆ. ಸಮುದ್ರ ತೀರದ ಭದ್ರತೆಯ ದೃಷ್ಟಿಯಿಂದಲೂ ಇದು ಅಗತ್ಯವಾಗಿದ್ದು, ಅವರನ್ನು ಕೂಡಲೇ ಸ್ಥಳಾಂತರಿಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ.